Bible Language

Zechariah 10 (ERVKN) Easy to Read Version - Kannadam

1 ವಸಂತ ಕಾಲದಲ್ಲಿ ಮಳೆಗಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ಯೆಹೋವನು ಮಿಂಚನ್ನು ಕಳುಹಿಸುವನು; ಆಗ ಮಳೆ ಸುರಿಯುವುದು ಮತ್ತು ದೇವರು ಎಲ್ಲರ ಹೊಲಗಳಲ್ಲಿ ಸಸಿಗಳು ಬೆಳೆಯುವಂತೆ ಮಾಡುವನು.
2 ಜನರು ಭವಿಷ್ಯವನ್ನು ತಿಳಿಯುವುದಕ್ಕೆ ತಮ್ಮ ಸಣ್ಣ ಬೊಂಬೆಗಳನ್ನೋ ಮಂತ್ರಜಾಲವನ್ನೋ ಉಪಯೋಗಿಸುವರು. ಆದರೆ ಅವೆಲ್ಲಾ ನಿಷ್ಪ್ರಯೋಜಕ. ಜನರು ದರ್ಶನವನ್ನು ನೋಡುವರು ಮತ್ತು ಕನಸುಗಳ ಬಗ್ಗೆ ಹೇಳುವರು. ಆದರೆ ಅವುಗಳೆಲ್ಲಾ ನಿಷ್ಪ್ರಯೋಜಕ ಸುಳ್ಳುಗಳಾಗಿವೆ. ಆದ್ದರಿಂದ ಜನರು ಸಹಾಯಕ್ಕಾಗಿ ಕೂಗುತ್ತಾ ಅತ್ತಿಂದಿತ್ತ ತಿರುಗಾಡುವ ಕುರಿಗಳಂತಿದ್ದಾರೆ. ಅವುಗಳನ್ನು ನಡಿಸಲು ಕುರುಬರೇ ಇಲ್ಲ.
3 ಯೆಹೋವನು ಹೇಳುವದೇನೆಂದರೆ, “ನಾನು ಕುರುಬರ ಮೇಲೆ ಬಹಳವಾಗಿ ಕೋಪಿಸಿರುವೆನು. ನಾಯಕರನ್ನು ನಾನು ನನ್ನ ಜನರ ಮೇಲೆ ಜವಾಬ್ದಾರರನ್ನಾಗಿ ಮಾಡಿದ್ದೇನೆ.” ಯೆಹೂದದ ಜನರು ದೇವರ ಮಂದೆಯಾಗಿದ್ದಾರೆ. ಹೇಗೆ ಸಿಪಾಯಿಯು ತನ್ನ ಯುದ್ಧದ ಕುದುರೆಯನ್ನು ಪರಾಂಬರಿತ್ತಾನೋ ಹಾಗೆ ಸರ್ವಶಕ್ತನಾದ ಯೆಹೋವನು ತನ್ನ ಮಂದೆಯನ್ನು ನಿಜವಾಗಿಯೂ ಪರಾಂಬರಿಸುತ್ತಾನೆ.
4 “ಮೂಲೇ ಕಲ್ಲು, ಗುಡಾರದ ಗೂಟ, ಯುದ್ಧದ ಬಿಲ್ಲು ಮತ್ತು ಮುನ್ನುಗ್ಗುವ ಸೈನ್ಯ, ಇವೆಲ್ಲವು ಒಟ್ಟಾಗಿ ಯೆಹೂದಿಂದ ಬರುವದು.
5 ಇವರು ಶತ್ರುಗಳನ್ನು ಜಯಿಸುವರು. ಸೈನಿಕರು ರಸ್ತೆಯ ಧೂಳಿನ ಮೇಲೆ ಮುನ್ನಡೆದು ಯೆಹೋವನು ಅವರೊಂದಿಗಿರುವದರಿಂದ ಅವರು ಅಶ್ವಾರೂಢನಾಗಿರುವ ಶತ್ರುಸೈನ್ಯವನ್ನು ಸದೆಬಡಿಯುವರು.
6 ಯೆಹೂದ ವಂಶವನ್ನು ನಾನು ಬಲಗೊಳಿಸುವೆನು. ಯೋಸೇಫನ ವಂಶದವರಿಗೆ ಜಯವಾಗುವಂತೆ ಮಾಡುವೆನು. ನಾನು ಅವರನ್ನು ಹಿಂದಕ್ಕೆ ಸುರಕ್ಷಿತವಾಗಿ ಕರಕೊಂಡು ಬರುವೆನು. ಅವರನ್ನು ಸಂತೈಸುವೆನು. ನಾನು ಎಂದಿಗೂ ಅವರನ್ನು ತೊರೆಯಲಿಲ್ಲವೆಂಬಂತೆ ಇರುವುದು. ನಾನು ಅವರ ದೇವರಾದ ಯೆಹೋವನು. ನಾನೇ ಅವರಿಗೆ ಸಹಾಯ ಮಾಡುವೆನು.
7 ಕುಡಿದು ಮತ್ತರಾದ ಸೈನಿಕರು ಸಂತೋಷಪಡುವಂತೆ ಎಫ್ರಾಯೀಮ್ಯರು ಸಂತಸದಿಂದಿರುವರು. ಮಕ್ಕಳೂ ಆನಂದದಿಂದ ನಲಿದಾಡುವರು. ಅವರೆಲ್ಲರೂ ಯೆಹೋವನ ಜೊತೆಯಲ್ಲಿ ಸಂತೋಷದಿಂದಿರುವರು.
8 “ನಾನು ಶೀಟಿ ಹೊಡೆದು ಎಲ್ಲರನ್ನು ಒಟ್ಟು ಸೇರಿಸುವೆನು. ನಾನು ನಿಜವಾಗಿಯೂ ಅವರನ್ನು ರಕ್ಷಿಸುವೆನು. ಜನರು ಕಿಕ್ಕಿರಿದು ತುಂಬಿಹೋಗುವರು.
9 ಹೌದು, ನಾನು ನನ್ನ ಜನರನ್ನು ಎಲ್ಲಾ ರಾಜ್ಯಗಳಿಗೆ ಚದರಿಸಿ ಬಿಟ್ಟಿರುತ್ತೇನೆ. ಆದರೆ ಬಹುದೂರದ ರಾಜ್ಯಗಳಲ್ಲಿ ಅವರು ನನ್ನನ್ನು ನೆನಪು ಮಾಡುವರು. ಅವರೂ ಅವರ ಮಕ್ಕಳೂ ಉಳಿಯುವರು ಮತ್ತು ಅವರು ಹಿಂತಿರುಗಿ ಬರುವರು.
10 ನಾನು ಅವರನ್ನು ಈಜಿಪ್ಟ್‌ನಿಂದ ಮತ್ತು ಅಶ್ಯೂರದಿಂದ ಹಿಂದಕ್ಕೆ ತರುವೆನು. ಅವರನ್ನು ಗಿಲ್ಯಾದಿಗೆ ಕರೆದುಕೊಂಡು ಬರುವೆನು. ಅಲ್ಲಿ ಅವರಿಗೆ ಸ್ಥಳ ಸಾಲದು. ಆದುದರಿಂದ ಅವರು ಪಕ್ಕದ ಲೆಬನೋನ್ ಪ್ರಾಂತ್ಯದಲ್ಲಿ ವಾಸಿಸುವಂತೆ ಮಾಡುವೆನು.”
11 ಇದು ಹಿಂದಿನ ಕಾಲದಲ್ಲಿ ದೇವರು ಅವರನ್ನು ಈಜಿಪ್ಟಿನಿಂದ ಬಿಡಿಸಿ ತಂದಂತೆ ಇರುವದು. ಆತನು ಸಮುದ್ರದ ತೆರೆಗಳನ್ನು ಬಡಿದು ಅದು ಇಬ್ಭಾಗವಾಗುವಂತೆ ಮಾಡಿದನು. ಜನರು ಸಂಕಟದ ಸಮುದ್ರದ ಮಧ್ಯದಲ್ಲಿ ದಾಟಿಹೋದರು. ಯೆಹೋವನು ಹೊಳೆಗಳನ್ನು ಬತ್ತಿಸಿಬಿಡುವನು. ಆತನು ಅಶ್ಯೂರ್ಯದ ಜಂಭವನ್ನೂ ಈಜಿಪ್ಟಿನ ಬಲವನ್ನೂ ಮುರಿಯುವನು.
12 ಯೆಹೋವನು ತನ್ನ ಜನರನ್ನು ಶಕ್ತಿಶಾಲಿಗಳನ್ನಾಗಿ ಮಾಡುವನು. ಅವರು ಆತನ ನಾಮದ ಘನತೆಗೋಸ್ಕರ ಜೀವಿಸುವರು. ಇದು ಯೆಹೋವನ ನುಡಿ.