Bible Versions
Bible Books

Luke 24 (ERVKN) Easy to Read Version - Kannadam

1 ಭಾನುವಾರ ಮುಂಜಾನೆ ಇನ್ನೂ ಮೊಬ್ಬಿರುವಾಗ ಯೇಸುವಿನ ದೇಹವನ್ನಿಟ್ಟ ಸಮಾಧಿಯ ಬಳಿಗೆ ಸ್ತ್ರೀಯರು ತಾವು ಸಿದ್ಧಮಾಡಿದ ಪರಿಮಳದ್ರವ್ಯಗಳನ್ನು ತೆಗೆದುಕೊಂಡು ಬಂದರು.
2 ಬಂಡೆ ಉರಳಿಸಲ್ಪಟ್ಟಿರುವುದನ್ನು ಕಂಡ ಅವರು ಒಳಗೆ ಹೋದರು.
3 ಆದರೆ ಪ್ರಭು ಯೇಸುವಿನ ದೇಹವನ್ನು ಅವರು ಕಾಣಲಿಲ್ಲ.
4 ಸ್ತ್ರೀಯರಿಗೆ ಇದು ಅರ್ಥವಾಗದೆ ಆಶ್ಚರ್ಯಪಡುತ್ತಿರಲು, ಹೊಳೆಯುವ ಉಡುಪುಗಳನ್ನು ಧರಿಸಿಕೊಂಡಿದ್ದ ಇಬ್ಬರು (ದೇವದೂತರು) ಅವರ ಬಳಿಯಲ್ಲಿ ನಿಂತರು.
5 ಸ್ತ್ರೀಯರು ಬಹಳವಾಗಿ ಹೆದರಿ ತಮ್ಮ ಮುಖಗಳನ್ನು ನೆಲದ ಕಡೆಗೆ ಬಗ್ಗಿಸಿಕೊಂಡು ನಿಂತರು. ಮನುಷ್ಯರು, “ಬದುಕಿರುವ ವ್ಯಕ್ತಿಯನ್ನು ಇಲ್ಲಿ ಹುಡುಕುವುದೇಕೆ? ಇದು ಸತ್ತ ಜನರನ್ನು ಇಡುವ ಸ್ಥಳ!
6 ಯೇಸು ಇಲ್ಲಿಲ್ಲ. ಆತನು ಜೀವಂತವಾಗಿ ಎದ್ದಿದ್ದಾನೆ! ಆತನು ಗಲಿಲಾಯದಲ್ಲಿದ್ದಾಗ ಹೇಳಿದ ವಿಷಯ ಜ್ಞಾಪಕವಿಲ್ಲವೋ?
7 ಮನುಷ್ಯಕುಮಾರನು ಕೆಡುಕರ ವಶಕ್ಕೆ ಒಪ್ಪಿಸಲ್ಪಟ್ಟು; ಶಿಲುಬೆಯ ಮೇಲೆ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದುಬರುವನು ಎಂದು ಯೇಸು ತಿಳಿಸಲಿಲ್ಲವೇ!” ಎಂದು ಹೇಳಿದರು.
8 ಆಗ ಸ್ತ್ರೀಯರು ಯೇಸುವಿನ ಮಾತುಗಳನ್ನು ಜ್ಞಾಪಿಸಿಕೊಂಡರು.
9 ಸ್ತ್ರೀಯರು ಸಮಾಧಿಯಿಂದ ಹೊರಟು ಹನ್ನೊಂದು ಮಂದಿ ಅಪೊಸ್ತಲರ ಮತ್ತು ಇತರ ಹಿಂಬಾಲಕರ ಬಳಿಗೆ ಹೋದರು. ಸ್ತ್ರೀಯರು ಸಮಾಧಿಯ ಬಳಿ ನಡೆದ ಸಂಗತಿಗಳನ್ನೆಲ್ಲಾ ಅವರಿಗೆ ಹೇಳಿದರು.
10 ಸ್ತ್ರೀಯರು ಯಾರೆಂದರೆ: ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಮತ್ತು ಬೇರೆ ಕೆಲವು ಸ್ತ್ರೀಯರು. ನಡೆದ ಪ್ರತಿಯೊಂದನ್ನೂ ಸ್ತ್ರೀಯರು ಅಪೊಸ್ತಲರಿಗೆ ತಿಳಿಸಿದರು.
11 ಆದರೆ ಅಪೊಸ್ತಲರು ನಂಬಲಿಲ್ಲ. ಅವರಿಗೆ ಅದು ಹರಟೆಮಾತಾಗಿ ತೋರಿತು.
12 ಆದರೆ ಪೇತ್ರನು ಎದ್ದು ಇದು ನಿಜವೇ ಎಂದು ನೋಡಲು ಸಮಾಧಿಗೆ ಓಡಿಹೋದನು. ಅವನು ಒಳಗೆ ಹೋಗಿ ಬಗ್ಗಿ ನೋಡಿದಾಗ ಯೇಸುವಿನ ದೇಹಕ್ಕೆ ಸುತ್ತಿದ್ದ ಬಟ್ಟೆಯನ್ನು ಮಾತ್ರ ನೋಡಿದನು. ಕೇವಲ ಬಟ್ಟೆಯು ಅಲ್ಲಿ ಬಿದ್ದಿತ್ತು. ನಡೆದ ಸಂಗತಿಯ ಬಗ್ಗೆ ಪೇತ್ರನು ಆಶ್ಚರ್ಯಪಡುತ್ತಾ ಹೊರಟುಹೋದನು.
13 ಅದೇ ದಿನ ಯೇಸುವಿನ ಶಿಷ್ಯರಲ್ಲಿ ಇಬ್ಬರು ಎಮ್ಮಾಹು ಎಂಬ ಪಟ್ಟಣಕ್ಕೆ ಹೋಗುತ್ತಿದ್ದರು. ಅದು ಜೆರುಸಲೇಮಿನಿಂದ ಏಳು ಮೈಲಿ ದೂರದಲ್ಲಿತ್ತು.
14 ನಡೆದ ಪ್ರತಿಯೊಂದು ಸಂಗತಿಯ ಕುರಿತು ಅವರು ಮಾತಾಡುತ್ತಿದ್ದರು.
15 ಆಗ ಯೇಸು ತಾನೇ ಅವರ ಹತ್ತಿರಕ್ಕೆ ಬಂದು, ಅವರ ಜೊತೆಯಲ್ಲಿ ಹೋದನು.
16 (ಆದರೆ ಅವರಿಗೆ ಆತನ ಗುರುತು ಸಿಕ್ಕಲಿಲ್ಲ.)
17 ಯೇಸು ಅವರಿಗೆ, “ನೀವು ಯಾವ ಸಂಗತಿಗಳ ಬಗ್ಗೆ ಮಾತಾಡುತ್ತಿದ್ದೀರಿ?” ಎಂದು ಕೇಳಿದನು. ಅವರಿಬ್ಬರು ಅಲ್ಲೇ ನಿಂತರು. ಅವರ ಮುಖಗಳು ಬಹಳ ದುಃಖದಿಂದ ತುಂಬಿಹೋಗಿದ್ದವು.
18 ಅವರಲ್ಲಿ ಕ್ಲೆಯೋಫನೆಂಬುವನು, “ಇತ್ತೀಚೆಗೆ ಜೆರುಸಲೇಮಿನಲ್ಲಿ ನಡೆದ ಸಂಗತಿಯನ್ನು ತಿಳಿಯದಿರುವ ವ್ಯಕ್ತಿ ಎಂದರೆ ನೀನೊಬ್ಬನೇ ಇರಬೇಕು” ಎಂದು ಉತ್ತರಿಸಿದನು.
19 ಯೇಸು ಅವರಿಗೆ, “ನೀವು ಯಾವುದರ ಬಗ್ಗೆ ಮಾತಾಡುತ್ತಿದ್ದೀರಿ?” ಎಂದು ಕೇಳಿದನು. ಅವರು ಆತನಿಗೆ, “ನಜರೇತಿನ ಯೇಸುವಿನ ಬಗ್ಗೆ. ಆತನು ದೇವರ ಮತ್ತು ಮನುಷ್ಯರ ದೃಷ್ಟಿಯಲ್ಲಿ ಮಹಾಪ್ರವಾದಿಯಾಗಿದ್ದನು. ಆತನು ಅನೇಕ ಸಂಗತಿಗಳನ್ನು ಹೇಳಿದನು ಮತ್ತು ಅದ್ಭುತಕಾರ್ಯಗಳನ್ನು ಮಾಡಿದನು.
20 ನಮ್ಮ ನಾಯಕರು ಮತ್ತು ಮಹಾಯಾಜಕರು ಆತನಿಗೆ ಮರಣದಂಡನೆ ವಿಧಿಸಲು ಒಪ್ಪಿಸಿಕೊಟ್ಟು ಶಿಲುಬೆಗೆ ಜಡಿಸಿದರು.
21 ಯೇಸುವೇ ಇಸ್ರೇಲ್ ಜನರನ್ನು (ಯೆಹೂದ್ಯರನ್ನು) ಬಿಡಿಸುತ್ತಾನೆಂದು ನಾವು ನಿರೀಕ್ಷಿಸಿಕೊಂಡಿದ್ದೆವು. ಆದರೆ ಇದೆಲ್ಲಾ ನಡೆದುಹೋಯಿತು. ಈಗ ಮತ್ತೊಂದು ಸಂಗತಿಯಾಗಿದೆ. ಈಗಾಗಲೇ ಆತನು ಸತ್ತು ಮೂರು ದಿನಗಳಾದವು.
22 ಇಂದು ನಮ್ಮ ಕೆಲವು ಸ್ತ್ರೀಯರು ಆಶ್ಚರ್ಯಕರವಾದ ಸಂಗತಿಗಳನ್ನು ಹೇಳಿದರು. ಮುಂಜಾನೆ ಬೆಳಗಾಗುವಾಗ, ಯೇಸುವಿನ ದೇಹವನ್ನು ಇಟ್ಟಿದ್ದ ಸಮಾಧಿಯ ಬಳಿಗೆ ಸ್ತ್ರೀಯರು ಹೋಗಿದ್ದರು.
23 ಆದರೆ ಅವರು ಆತನ ದೇಹವನ್ನು ಅಲ್ಲಿ ಕಾಣಲಿಲ್ಲ. ಸ್ತ್ರೀಯರು ಹಿಂತಿರುಗಿ ಬಂದು ತಮಗೆ ದೇವದೂತರಿಬ್ಬರ ದರ್ಶನವಾಯಿತೆಂದೂ ಯೇಸು ಬದುಕಿದ್ದಾನೆಂದೂ ತಮಗೆ ಇದನ್ನು ದೇವದೂತರೇ ತಿಳಿಸಿದರೆಂದೂ ನಮಗೆ ಹೇಳಿದರು.
24 ಆದ್ದರಿಂದ ನಮ್ಮ ಗುಂಪಿನಲ್ಲಿದ್ದ ಕೆಲವರು ಸಹ ಸಮಾಧಿಯ ಬಳಿಗೆ ಹೋದರು. ಸ್ತ್ರೀಯರು ಹೇಳಿದ ಹಾಗೆಯೇ ಸಮಾಧಿಯು ಬರಿದಾಗಿತ್ತು. ನಾವು ಸುತ್ತಮುತ್ತ ನೋಡಿದೆವು. ಆದರೆ ನಮ್ಮಲ್ಲಿ ಯಾರಿಗೂ ಆತನು (ಯೇಸು) ಕಾಣಲಿಲ್ಲ” ಎಂದು ಹೇಳಿದರು.
25 ಆಗ ಯೇಸು ಅವರಿಗೆ, “ನೀವು ಬುದ್ಧಿಹೀನರು ಮತ್ತು ಸತ್ಯವನ್ನು ಗ್ರಹಿಸುವುದರಲ್ಲಿ ಮಂದಗತಿಗಳು! ಪ್ರವಾದಿಗಳು ಹೇಳಿದ ಪ್ರತಿಯೊಂದನ್ನೂ ನೀವು ನಂಬಬೇಕು.
26 ಕ್ರಿಸ್ತನು ತನ್ನ ಮಹಿಮೆಯನ್ನು ಪ್ರವೇಶಿಸುವ ಮೊದಲು ಇಂಥ ಶ್ರಮೆಗಳನ್ನು ಅನುಭವಿಸಬೇಕು ಎಂದು ಪ್ರವಾದಿಗಳು ಹೇಳಿದ್ದಾರೆ” ಅಂದನು.
27 ಬಳಿಕ ಯೇಸು ತನ್ನ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರತಿಯೊಂದನ್ನೂ ವಿವರಿಸತೊಡಗಿದನು. ಯೇಸುವು ಮೋಶೆಯ ಗ್ರಂಥಗಳಿಂದ ಪ್ರಾರಂಭಿಸಿ ಪ್ರವಾದಿಗಳು ತನ್ನ ಬಗ್ಗೆ ಹೇಳಿದ ವಿಷಯಗಳ ಕುರಿತು ವಿವರಿಸಿದನು.
28 ಅವರು ಎಮ್ಮಾಹು ಊರಿನ ಹತ್ತಿರಕ್ಕೆ ಬಂದಾಗ ಆತನು ತಾನು ಅಲ್ಲಿ ಇಳಿದುಕೊಳ್ಳದವನಂತೆ ನಟಿಸಿದನು.
29 ಆದರೆ ಅವರು ಆತನಿಗೆ, “ಈಗ ಹೊತ್ತಾಯಿತು, ರಾತ್ರಿಯಾಗುತ್ತಾ ಬಂದಿದೆ. ನಮ್ಮೊಂದಿಗೆ ಇರು” ಎಂದು ಬೇಡಿಕೊಂಡರು. ಆದ್ದರಿಂದ ಆತನು ಅವರೊಂದಿಗಿರಲು ಊರೊಳಗೆ ಹೋದನು.
30 ಯೇಸು ಅವರ ಸಂಗಡ ಕುಳಿತುಕೊಂಡು ಸ್ವಲ್ಪ ರೊಟ್ಟಿಯನ್ನು ತೆಗೆದುಕೊಂಡನು. ಆತನು ಆಹಾರಕ್ಕಾಗಿ ದೇವರಿಗೆ ಸೋತ್ರಮಾಡಿ ಅದನ್ನು ಮುರಿದು ಅವರಿಗೆ ಕೊಟ್ಟನು.
31 ಆಗ ಅವರು ಯೇಸುವನ್ನು ಗುರುತಿಸಿದರು. ಆದರೆ ಆತನೇ ಯೇಸುವೆಂದು ಅವರು ತಿಳಿದಾಕ್ಷಣವೇ ಆತನು ಅವರ ಕಣ್ಣಿಗೆ ಮಾಯವಾದನು.
32 ಅವರಿಬ್ಬರು, “ಯೇಸು ದಾರಿಯಲ್ಲಿ ನಮ್ಮ ಸಂಗಡ ಮಾತಾಡಿದಾಗ ನಮ್ಮಲ್ಲಿ ಬೆಂಕಿ ಉರಿದಂತಾಯಿತಲ್ಲವೇ? ಪವಿತ್ರ ಗ್ರಂಥದ ನಿಜ ಅರ್ಥವನ್ನು ಆತನು ವಿವರಿಸಿದಾಗ, ಬಹಳ ರೋಮಾಂಚಕಾರಿಯಾಗಿರಲಿಲ್ಲವೇ?” ಎಂದು ಮಾತಾಡಿಕೊಂಡರು.
33 ಕೂಡಲೇ ಅವರಿಬ್ಬರೂ ಎದ್ದು ಜೆರುಸಲೇಮಿಗೆ ಹಿಂತಿರುಗಿ ಹೋದರು. ಜೆರುಲೇಮಿನಲ್ಲಿ ಯೇಸುವಿನ ಶಿಷ್ಯರು ಒಟ್ಟಾಗಿ ಸೇರಿಬಂದಿದ್ದರು. ಹನ್ನೂಂದು ಮಂದಿ ಅಪೊಸ್ತಲರು ಮತ್ತು ಅವರ ಸಂಗಡ ಇದ್ದ ಜನರು,
34 ”ಪ್ರಭುವು (ಯೇಸು) ಸತ್ತವರೊಳಗಿಂದ ನಿಜವಾಗಿ ಎದ್ದಿದ್ದಾನೆ! ಆತನು ಸೀಮೋನನಿಗೆ (ಪೇತ್ರ) ಕಾಣಿಸಿಕೊಂಡನು” ಎಂದು ಹೇಳಿದರು.
35 ಆಗ ಇಬ್ಬರು ದಾರಿಯಲ್ಲಿ ನಡೆದ ಸಂಗತಿಗಳನ್ನು ತಿಳಿಸಿದರು. ಆತನು ರೊಟ್ಟಿ ಮುರಿದಾಗ ತಾವು ಆತನನ್ನು ಗುರುತಿಸಿದ್ದಾಗಿ ಅವರು ಹೇಳಿದರು.
36 ಅವರಿಬ್ಬರೂ ಸಂಗತಿಗಳನ್ನು ಹೇಳುತ್ತಿದ್ದಾಗ, ಯೇಸುವು ಶಿಷ್ಯರ ಗುಂಪಿನ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ನಿಮಗೆ ಶಾಂತಿಯಾಗಲಿ” ಅಂದನು.
37 ಆಗ ಶಿಷ್ಯರು ಬೆರಗಾದರು. ಅವರಿಗೆ ಭಯವಾಯಿತು. ಅದು ಭೂತವೇ ಇರಬೇಕೆಂದು ಅವರು ಭಾವಿಸಿದರು.
38 ಆದರೆ ಯೇಸು, “ನೀವು ಏಕೆ ಗಲಿಬಿಲಿಗೊಂಡಿದ್ದೀರಿ? ನೀವು ಕಣ್ಣಾರೆ ಕಂಡರೂ ಏಕೆ ಸಂಶಯಪಡುತ್ತೀರಿ?
39 ನನ್ನ ಕೈಗಳನ್ನು ಮತ್ತು ಪಾದಗಳನ್ನು ನೋಡಿರಿ. ನಾನೇ ಅಲ್ಲವೇ! ನನ್ನನ್ನು ಮುಟ್ಟಿರಿ. ನನ್ನ ಜೀವಂತ ದೇಹವನ್ನು ನೀವೇ ನೋಡಿರಿ. ಭೂತಕ್ಕೆ ರೀತಿಯ ದೇಹವಿರುವುದಿಲ್ಲ” ಅಂದನು.
40 ಯೇಸು ಅವರಿಗೆ ಇದನ್ನು ಹೇಳಿದ ನಂತರ, ತನ್ನ ಕೈಗಳಲ್ಲಿ ಮತ್ತು ಪಾದಗಳಲ್ಲಿರುವ ಗಾಯದ ಗುರುತುಗಳನ್ನು ತೋರಿಸಿದನು.
41 ಶಿಷ್ಯರು ಅತ್ಯಾಶ್ಚರ್ಯಗೊಂಡರು ಮತ್ತು ಯೇಸುವನ್ನು ಜೀವಂತವಾಗಿ ಕಂಡು ಅತ್ಯಂತ ಸಂತೋಷಪಟ್ಟರು. ಆದರೆ ಅವರಿಗಿನ್ನೂ ನಂಬಲಾಗಲಿಲ್ಲ. ಯೇಸು ಅವರಿಗೆ, “ನಿಮ್ಮಲ್ಲಿ ಆಹಾರವೇನಾದರೂ ಇದೆಯೋ?” ಎಂದು ಕೇಳಿದನು.
42 ಅವರು ಸುಟ್ಟ ಮೀನಿನ ತುಂಡನ್ನು ಕೊಟ್ಟರು.
43 ಶಿಷ್ಯರ ಕಣ್ಣೆದುರಿನಲ್ಲಿಯೇ, ಯೇಸು ಮೀನನ್ನು ತೆಗೆದುಕೊಂಡು ತಿಂದನು.
44 ಯೇಸು ಅವರಿಗೆ, “ನಾನು ಮೊದಲು ನಿಮ್ಮ ಸಂಗಡ ಇದ್ದುದನ್ನು ಜ್ಞಾಪಕಮಾಡಿಕೊಳ್ಳಿರಿ. ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿ ಪ್ರವಾದಿಗಳ ಗ್ರಂಥಗಳಲ್ಲಿ, ಕೀರ್ತನೆಗಳಲ್ಲಿ ಬರೆದಿರುವ ಪ್ರತಿಯೊಂದು ಸಂಗತಿಯೂ ನೆರವೇರಬೇಕಾಗಿದೆ ಎಂದು ನಾನು ಹೇಳಿದೆನು” ಅಂದನು.
45 ಬಳಿಕ ಯೇಸು ಪವಿತ್ರ ಗ್ರಂಥವನ್ನು ತನ್ನ ಶಿಷ್ಯರಿಗೆ ವಿವರಿಸಿದನು. ತನ್ನ ಬಗ್ಗೆ ಬರೆದಿರುವ ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಿದನು.
46 ಬಳಿಕ ಯೇಸು ಅವರಿಗೆ, “ಕ್ರಿಸ್ತನು ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಸತ್ತವರೊಳಗಿಂದ ಎದ್ದುಬರುವನು” ಎಂದು ಬರೆಯಲ್ಪಟ್ಟಿದೆ.
47 This verse may not be a part of this translation
48 This verse may not be a part of this translation
49 ಕೇಳಿರಿ! ನನ್ನ ತಂದೆ ನಿಮಗೆ ವಾಗ್ದಾನ ಮಾಡಿದ್ದನ್ನು ನಾನು ನಿಮಗೆ ಕಳುಹಿಸಿಕೊಡುತ್ತೇನೆ. ಆದರೆ ನೀವು ಪರಲೋಕದಿಂದ ಶಕ್ತಿಯನ್ನು ಪಡೆಯುವ ತನಕ ಜೆರುಸಲೇಮಿನಲ್ಲೇ ಕಾದುಕೊಂಡಿರಿ”ಅಂದನು.
50 ಯೇಸು ತನ್ನ ಶಿಷ್ಯರನ್ನು ಜೆರುಸಲೇಮಿನ ಹೊರಗೆ ಬೆಥಾನಿಯದ ಸಮೀಪಕ್ಕೆ ಕರೆದುಕೊಂಡು ಹೋದನು. ಯೇಸು ತನ್ನ ಕೈಗಳನ್ನು ಎತ್ತಿ ಶಿಷ್ಯರನ್ನು ಆಶೀರ್ವದಿಸಿದನು.
51 ಯೇಸು ಅವರನ್ನು ಆಶೀರ್ವದಿಸುತ್ತಿದ್ದಾಗ ಅವರಿಂದ ಬೇರ್ಪಟ್ಟು ಪರಲೋಕಕ್ಕೆ ಎತ್ತಲ್ಪಟ್ಟನು.
52 ಶಿಷ್ಯರು ಅಲ್ಲಿ ಆತನನ್ನು ಆರಾಧಿಸಿದರು. ಬಳಿಕ ಅವರು ಪಟ್ಟಣಕ್ಕೆ ಹಿಂತಿರುಗಿ ಹೋದರು. ಅವರು ಬಹಳ ಸಂತೋಷಗೊಂಡಿದ್ದರು.
53 ಅವರು ಯಾವಾಗಲೂ ದೇವಾಲಯದಲ್ಲಿ ದೇವರನ್ನು ಸ್ತುತಿಸುತ್ತಿದ್ದರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×