Bible Versions
Bible Books

Proverbs 21 (ERVKN) Easy to Read Version - Kannadam

1 ಯೆಹೋವನು ರಾಜನ ಮನಸ್ಸನ್ನು ನೀರಿನ ಕಾಲುವೆಯಂತೆ ಹತೋಟಿಯಲ್ಲಿಡುವನು. ಆತನು ತನ್ನ ಇಷ್ಟಾನುಸಾರ ಅದಕ್ಕೆ ಮಾರ್ಗದರ್ಶನ ನೀಡುವನು.
2 ತನ್ನ ನಡತೆ ಸರಿಯೆಂದು ಒಬ್ಬನು ಭಾವಿಸಿಕೊಳ್ಳಬಹುದು; ಆದರೆ ಉದ್ದೇಶಗಳಿಗನುಸಾರವಾಗಿ ತೀರ್ಪು ನೀಡುವವನು ಯೆಹೋವನೇ.
3 ಸರಿಯಾದ ಮತ್ತು ನ್ಯಾಯವಾದ ಕಾರ್ಯಗಳನ್ನು ಮಾಡು. ಯೆಹೋವನು ಅವುಗಳನ್ನು ಯಜ್ಞಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವನು.
4 ಗರ್ವದ ಕಣ್ಣುಗಳು ಮತ್ತು ದುರಾಭಿಮಾನದ ಹೃದಯ ಪಾಪಮಯವಾಗಿದ್ದು ದುಷ್ಟನಿಗೆ ಮಾರ್ಗದರ್ಶನ ನೀಡುತ್ತವೆ.
5 ಕಷ್ಟಪಟ್ಟು ದುಡಿಯುವವನ ಆಲೋಚನೆಗಳು ಲಾಭಕ್ಕೆ ನಡೆಸುತ್ತವೆ. ಆದರೆ ಆತುರತೆಯಲ್ಲೇ ಇರುವವನು ಬಡವನಾಗುವನು.
6 ನೀನು ಮೋಸದಿಂದ ಐಶ್ವರ್ಯವಂತನಾದರೆ, ಐಶ್ವರ್ಯವು ಬಹುಬೇಗನೆ ಇಲ್ಲವಾಗುತ್ತದೆ. ನಿನ್ನ ಐಶ್ವರ್ಯವು ನಿನ್ನನ್ನು ಮರಣಕ್ಕೆ ನಡೆಸುತ್ತದೆ.
7 ಕೆಡುಕರು ಕೊಡುವ ಹಿಂಸೆಯು ಅವರನ್ನೇ ನಾಶಮಾಡುತ್ತದೆ; ಯಾಕೆಂದರೆ ಒಳ್ಳೆಯದನ್ನು ಮಾಡಲು ಅವರು ಒಪ್ಪುವುದೇ ಇಲ್ಲ.
8 ಕೆಟ್ಟವರು ಬೇರೆಯವರನ್ನು ಮೋಸಗೊಳಿಸುವುದಕ್ಕೇ ಪ್ರಯತ್ನಿಸುವರು. ಒಳ್ಳೆಯವರಾದರೊ ಯಥಾರ್ಥವಂತರೂ ನ್ಯಾಯವಂತರೂ ಆಗಿದ್ದಾರೆ.
9 ಮನೆಯೊಳಗೆ ವಾದಿಸುವ ಹೆಂಡತಿಯ ಜೊತೆಯಲ್ಲಿ ವಾಸಿಸುವುದಕ್ಕಿಂತ ಮನೆಯ ಮೇಲ್ಛಾವಣಿಗೆಯ ಮೂಲೆಯಲ್ಲಿ ವಾಸಿಸುವುದೇ ಮೇಲು.
10 ಕೆಡುಕರು ಕೇಡುಮಾಡುವುದಕ್ಕೇ ಇಷ್ಟಪಡುವರು; ಅವರು ತಮ್ಮ ಸುತ್ತಮುತ್ತಲಿರುವ ಜನರಿಗೆ ಕರುಣೆ ತೋರುವುದಿಲ್ಲ.
11 ದುರಾಭಿಮಾನಿಯು ದಂಡಿಸಲ್ಪಟ್ಟರೆ ದಡ್ಡನು ಜ್ಞಾನಿಯಾಗುವನು. ಜ್ಞಾನಿಗೆ ಉಪದೇಶಿಸಿದರೆ ತಾನೇ ತಿಳುವಳಿಕೆಯನ್ನು ಹೊಂದವನು.
12 ದೇವರು ನೀತಿಸ್ವರೂಪನು. ಆತನು ದುಷ್ಟರ ದುಷ್ಕೃತ್ಯಗಳನ್ನು ಬಲ್ಲವನಾಗಿದ್ದು ಅವರನ್ನು ದಂಡಿಸುವನು.
13 ಬಡವರಿಗೆ ಸಹಾಯಮಾಡದವನು ತಾನೇ ಕೊರತೆಯಲ್ಲಿರುವಾಗ ಯಾರೂ ಅವನಿಗೆ ಸಹಾಯ ಮಾಡುವುದಿಲ್ಲ.
14 ನಿನ್ನ ಮೇಲೆ ಕೋಪಗೊಂಡಿರುವವನಿಗೆ ಒಂದು ಉಡುಗೊರೆಯನ್ನು ಗುಟ್ಟಾಗಿ ಕೊಡು. ಗುಟ್ಟಾಗಿ ಕೊಟ್ಟ ಉಡುಗೊರೆಯು ಮಹಾ ಕೋಪವನ್ನೂ ಅಡಗಿಸಬಲ್ಲದು.
15 ನ್ಯಾಯವಾದ ತೀರ್ಪು ಒಳ್ಳೆಯವರಿಗೆ ಸಂತೋಷ; ಕೆಡುಕರಿಗೆ ಬಹುಭಯ.
16 ಜ್ಞಾನದ ಮಾರ್ಗವನ್ನು ತೊರೆದವನು ನಾಶನದ ಕಡೆಗೆ ಹೋಗುತ್ತಿರುವನು.
17 ಸುಖವನ್ನು ಪ್ರೀತಿಸುವವನು ಬಡವನಾಗುವನು. ದ್ರಾಕ್ಷಾರಸವನ್ನೂ ತೈಲವನ್ನೂ ಪ್ರೀತಿಸುವವನು ಐಶ್ವರ್ಯವಂತನಾಗಲಾರನು.
18 ಒಳ್ಳೆಯವರ ಬದಲಾಗಿ ಕೆಡುಕರು ಸಂಕಟಪಡುವರು. ನೀತಿವಂತರ ಬದಲಾಗಿ ದ್ರೋಹಿಗಳು ಸಂಕಟಪಡುವರು.
19 ಮುಂಗೋಪಿಯೂ ವಾದಿಸುವವಳೂ ಆಗಿರುವ ಹೆಂಡತಿಯೊಡನೆ ಜೀವಿಸುವುದಕ್ಕಿಂತ ಮರಳುಗಾಡಿನಲ್ಲಿ ಜೀವಿಸುವುದೇ ಮೇಲು.
20 ಜ್ಞಾನಿಯ ಮನೆಯಲ್ಲಿ ಬೆಲೆಬಾಳುವ ಭಂಡಾರಗಳೂ ಪರಿಮಳದ್ರವ್ಯಗಳೂ ಇರುತ್ತವೆ. ಮೂಢನಾದರೋ ತನ್ನಲ್ಲಿರುವ ಪ್ರತಿಯೊಂದನ್ನೂ ಬೇಗನೆ ಹಾಳುಮಾಡಿಕೊಳ್ಳುವನು.
21 ನ್ಯಾಯವನ್ನು ಮತ್ತು ಕರುಣೆಯನ್ನು ಹುಡುಕುವವನಿಗೆ ಒಳ್ಳೆಯ ಜೀವಿತವೂ ನ್ಯಾಯವೂ ಸನ್ಮಾನವೂ ದೊರೆಯುವುದು.
22 ಜ್ಞಾನಿಯು ಯುದ್ಧವೀರರಿಂದ ತುಂಬಿರುವ ಪಟ್ಟಣದ ಮೇಲೆ ಆಕ್ರಮಣಮಾಡಿ ಅವರ ಆಶ್ರಯ ಕೋಟೆಯನ್ನು ನಾಶಮಾಡಬಲ್ಲನು.
23 ಎಚ್ಚರಿಕೆಯಿಂದ ಮಾತಾಡುವವನು ತೊಂದರೆಯಿಂದ ಪಾರಾಗುವನು.
24 ಗರ್ವಿಷ್ಠನೂ ದುರಾಭಿಮಾನಿಯೂ ಆಗಿರುವವನಿಗೆ ಗೇಲಿಗಾರನೆಂದು ಹೆಸರು. ಅವನ ನಡತೆಯು ಗರ್ವದ ಮದದಿಂದ ಕೂಡಿರುತ್ತದೆ.
25 ಸೋಮಾರಿಯ ಆಸೆ ಅವನನ್ನು ಉಪವಾಸದಿಂದ ಸಾಯಿಸುವುದು, ಯಾಕೆಂದರೆ ಅವನು ದುಡಿಯುವುದಿಲ್ಲ.
26 ದುರಾಶೆಯುಳ್ಳವನು ಹೆಚ್ಚುಹೆಚ್ಚು ಅಪೇಕ್ಷಿಸುತ್ತಲೇ ಇರುವನು, ಆದರೆ ನೀತಿವಂತನು ಉದಾರವಾಗಿ ಕೊಡುವನು.
27 ಕೆಡುಕನ ಯಜ್ಞಗಳು ಯೆಹೋವನಿಗೆ ಅಸಹ್ಯ. ಯಾಕೆಂದರೆ ಅವು ದುರುದ್ದೇಶದಿಂದ ಕೂಡಿವೆ.
28 ಸುಳ್ಳುಸಾಕ್ಷಿಯು ನಾಶವಾಗುವನು. ಆದರೆ ಎಚ್ಚರಿಕೆಯಿಂದ ಕೇಳುವವನು ಮತಾಡುತ್ತಲೇ ಇರುವನು.
29 ದುಷ್ಟರು ನಾಚಿಕೆಯಿಲ್ಲದೆ ವರ್ತಿಸುವರು; ಆದರೆ ಒಳ್ಳೆಯವನು ತನ್ನ ಮಾರ್ಗಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸುವನು.
30 ಯೆಹೋವನೇ ವಿರೋಧವಾಗಿದ್ದರೆ, ಜಯಪ್ರಧವಾಗಬಲ್ಲ ಯೋಜನೆಯನ್ನು ಮಾಡುವಂಥ ಜ್ಞಾನ ಯಾರಿಗೂ ಇಲ್ಲ.
31 ಯುದ್ಧಕ್ಕಾಗಿ ಕುದುರೆಗಳನ್ನು ಸಿದ್ಧಪಡಿಸುತ್ತಾರೆ; ಆದರೆ ಜಯದ ನಿರ್ಧಾರ ಯೆಹೋವನಿಂದಲೇ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×